76 ವಿದ್ಯಾರ್ಥಿಗಳಲ್ಲಿ 75 ವಿದ್ಯಾರ್ಥಿಗಳು ಉತ್ತೀರ್ಣ
ಪುತ್ತೂರು ತಾಲೂಕಿನ ಕೆಪಿಎಸ್ ಕೆಯ್ಯೂರು ಕಾಲೇಜು 2026ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅದ್ಭುತ ಸಾಧನೆ ಮಾಡಿ ಶೇಕಡಾ 99% ಫಲಿತಾಂಶ ಗಳಿಸಿರುವುದು ಶಿಕ್ಷಣ ಕ್ಷೇತ್ರದಲ್ಲಿ ಸರಕಾರಿ ಗ್ರಾಮೀಣ ಶಾಲೆಯ ಗಮನಾರ್ಹ ಸಾಧನೆಯಾಗಿದೆ. ಮಾರ್ಚ್ 2026ರಲ್ಲಿ ನಡೆದ ಪರೀಕ್ಷೆ-1ರ ಫಲಿತಾಂಶದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಪ್ರತಿಭೆ, ಪರಿಶ್ರಮ ಮತ್ತು ಶಿಸ್ತಿನ ಮೂಲಕ ಅತ್ಯುತ್ತಮ ಸಾಧನೆಯನ್ನು ದಾಖಲಿಸಿದ್ದಾರೆ.
ಒಟ್ಟು 76 ವಿದ್ಯಾರ್ಥಿಗಳಲ್ಲಿ 75 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕೇವಲ ಒಬ್ಬ ವಿದ್ಯಾರ್ಥಿ ಮಾತ್ರ ಒಂದು ವಿಷಯದಲ್ಲಿ ಅನುತ್ತೀರ್ಣರಾಗಿರುವುದು ಗಮನಾರ್ಹ. ಇದರಲ್ಲಿ 27 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 44 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇದು ಕಾಲೇಜಿನ ಶಿಕ್ಷಣ ಗುಣಮಟ್ಟದ ಪ್ರತಿಬಿಂಬವಾಗಿದೆ.
ಕಾಲೇಜು ಪ್ರಾಂಶುಪಾಲರಾದ ಶ್ರೀಮತಿ ಹಸೀನಾ ಬಾನು ರವರು, ಉಪಪ್ರಾಂಶುಪಾಲರಾದ ಶ್ರೀ ವಿನೋದ್ ಕುಮಾರ್ ಕೆ ಎಸ್ ರವರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಎಕೆ ಜಯರಾಮ ರೈ ಯವರು ವಿದ್ಯಾರ್ಥಿಗಳ ಈ ಸಾಧನೆ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.
ಪಿಯುಸಿ ನಂತರ ಉದ್ಯೋಗ ಹುಡುಕುತ್ತಿದ್ದೀರಾ? ಹಾಗಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿ.

ವಿಭಾಗವಾರು ಸಾಧನೆ
ವಾಣಿಜ್ಯ ವಿಭಾಗ – ಶೇಕಡಾ 100 ಫಲಿತಾಂಶ
ವಾಣಿಜ್ಯ ವಿಭಾಗದಲ್ಲಿ ಶಾಲೆ ಶೇಕಡಾ 100 ಫಲಿತಾಂಶ ಪಡೆದು 33 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದಾರೆ. ವಿಶೇಷವಾಗಿ ಇವರಲ್ಲಿ 18 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದರೆ 15 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ವಿಭಾಗದಲ್ಲಿ ಮೊಹಮ್ಮದ್ ಸುಝಾನ್ ಐ.ಪಿ. (588/600 – 98%) ಅತಿ ಹೆಚ್ಚು ಅಂಕಗಳನ್ನು ಪಡೆದಿರುತ್ತಾರೆ.
ವಿಜ್ಞಾನ ವಿಭಾಗ – ಶೇಕಡಾ 100 ಫಲಿತಾಂಶ (ಸತತ 5ನೇ ಬಾರಿ)
ವಿಜ್ಞಾನ ವಿಭಾಗದಲ್ಲೂ ಸಂಸ್ಥೆ ಶೇಕಡಾ 100 ಫಲಿತಾಂಶ ದಾಖಲಿಸಿದ್ದು ಪರೀಕ್ಷೆಗೆ ಹಾಜರಾಗಿದ್ದ 22 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣರಾಗಿರುತ್ತಾರೆ. ವಿಶೇಷವಾಗಿ ಒಟ್ಟು 7 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಾದರೆ, 14 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಸಾಧಿಸಿದ್ದಾರೆ. ದೀಕ್ಷಾ ಎಂ.ಡಿ. (577/600 – 96%) ಅತಿ ಹೆಚ್ಚು ಅಂಕ ಪಡೆದು ವಿಭಾಗದ ಗೌರವ ಹೆಚ್ಚಿಸಿದ್ದಾರೆ.
ಕಲಾ ವಿಭಾಗ – ಶೇಕಡಾ 95 ಫಲಿತಾಂಶ
ಕಲಾ ವಿಭಾಗದಲ್ಲಿ ಸಂಸ್ಥೆ 95% ಫಲಿತಾಂಶ ದಾಖಲಿಸಿದ್ದು, ಪರೀಕ್ಷೆಗೆ ಹಾಜರಾಗಿದ್ದ 21ರಲ್ಲಿ 20 ವಿದ್ಯಾರ್ಥಿಗಳು ಉತ್ತೀರ್ಣರಾಗಿ, 2 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಬಂದರೆ, 15 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಸಾಧಿಸಿದ್ದಾರೆ. ಅಕ್ಷತ್ (564 ಅಂಕ) ವಿಭಾಗದ ಟಾಪರ್ ಆಗಿದ್ದಾರೆ.
ಈ ವರ್ಷದ ವಿಶೇಷ ಸಾಧನೆಗಳು
- ಕಾಲೇಜು ಸ್ಥಾಪನೆಯಾದ 1996ರಿಂದ ಮೊದಲ ಬಾರಿಗೆ 27 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಪಡೆದಿದ್ದಾರೆ.
- ವಾಣಿಜ್ಯ ವಿಭಾಗದಲ್ಲಿ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ (33ರಲ್ಲಿ 18).
- ವಾಣಿಜ್ಯ ವಿಭಾಗದ ಎಲ್ಲ ವಿದ್ಯಾರ್ಥಿಗಳು 60% ಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.
- ವಿಜ್ಞಾನ ವಿಭಾಗದಲ್ಲಿ ಸತತ 5ನೇ ವರ್ಷ 100% ಫಲಿತಾಂಶ.
- 71 ವಿದ್ಯಾರ್ಥಿಗಳು (76ರಲ್ಲಿ) ಪ್ರಥಮ ಶ್ರೇಣಿ ಅಥವಾ ಅದಕ್ಕಿಂತ ಹೆಚ್ಚು ಅಂಕ ಗಳಿಸಿದ್ದಾರೆ.
- 7 ವಿದ್ಯಾರ್ಥಿಗಳು ಕನಿಷ್ಠ ಒಂದು ವಿಷಯದಲ್ಲಿ 100 ಅಂಕ ಗಳಿಸಿದ್ದಾರೆ.
- ಫಾತಿಮಾತ್ ಶಹಾನಾಜ್ ಮತ್ತು ಫಾತಿಮಾತ್ ಮುಫೀದಾ ಮೂರು ವಿಷಯಗಳಲ್ಲಿ 100 ಅಂಕ ಗಳಿಸಿ ವಿಶೇಷ ಸಾಧನೆ ಮಾಡಿದ್ದಾರೆ.
ವಿಷಯವಾರು ಟಾಪರ್ಸ್
- ಕನ್ನಡ – ದೀಕ್ಷಾ ಎಂ.ಡಿ. (100)
- ಇಂಗ್ಲಿಷ್ – ಮೊಹಮ್ಮದ್ ಸುಝಾನ್ (95)
- ಇತಿಹಾಸ – ಫಾತಿಮಾತ್ ಶಹಾನಾಜ್, ಫಾತಿಮಾತ್ ಮುಫೀದಾ (100)
- ಅರ್ಥಶಾಸ್ತ್ರ – ಆಯಿಷತ್ ಶಮ್ನಾ, ಫಾತಿಮಾತ್ ಮುಫೀದಾ, ಫಾತಿಮಾತ್ ಸಮೀದಾ, ಫಾತಿಮಾತ್ ಶಹಾನಾಜ್ (100)
- ವ್ಯವಹಾರ ಅಧ್ಯಯನ – ಸುಝಾನ್, ಮುಫೀದಾ, ಶಹಾನಾಜ್ (100)
- ಲೆಕ್ಕಶಾಸ್ತ್ರ – ಸುಝಾನ್, ಮನ್ವಿತ್ (100)
- ಗಣಿತ – ದೀಕ್ಷಾ ಎಂ.ಡಿ. (100)
ಕೆಪಿಎಸ್ ಕೆಯ್ಯೂರು ಕಾಲೇಜಿನ ಈ ಸಾಧನೆ ಕೇವಲ ಅಂಕಗಳ ಜಯವಲ್ಲ, ಇದು ಶಿಕ್ಷಕರ ಸಮರ್ಪಣೆ, ವಿದ್ಯಾರ್ಥಿಗಳ ಪರಿಶ್ರಮ ಮತ್ತು ಪೋಷಕರ ಬೆಂಬಲದ ಜಯವಾಗಿದೆ. ಈ ಸಾಧನೆ ಮುಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ದೀಪವಾಗಿದೆ.
ಪರೀಕ್ಷೆಗೆ ಮುನ್ನ ವಿಶೇಷ ತರಗತಿಗಳು, ವೈಯಕ್ತಿಕ ಮಾರ್ಗದರ್ಶನ, ದುರ್ಬಲ ವಿದ್ಯಾರ್ಥಿಗಳ ಮೇಲಿನ ಹೆಚ್ಚಿನ ಗಮನ – ಈ ಎಲ್ಲ ಕ್ರಮಗಳು ವಿದ್ಯಾರ್ಥಿಗಳ ಸಾಧನೆಗೆ ಬಲ ನೀಡಿವೆ. ಪೋಷಕರ ಸಹಕಾರವೂ ಈ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದೆ.
“ಸಾಧನೆ ಒಂದು ದಿನದಲ್ಲಿ ಬರುವುದಿಲ್ಲ; ಅದು ನಿರಂತರ ಪರಿಶ್ರಮದ ಫಲ” ಎಂಬುದಕ್ಕೆ ಕೆಪಿಎಸ್ ಕೆಯ್ಯೂರು ವಿದ್ಯಾರ್ಥಿಗಳು ಜೀವಂತ ಉದಾಹರಣೆ.
ಈ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ, ಬೆನ್ನೆಲುಬಾಗಿ ನಿಂತ ಪ್ರಾಂಶುಪಾಲರಿಗೆ, ಉಪಪ್ರಾಂಶುಪಾಲರಿಗೆ, ಶಿಕ್ಷಕರಿಗೆ ಮತ್ತು ಪೋಷಕರಿಗೆ, ಹಾಗೂ ಪ್ರೋತ್ಸಾಹ ನೀಡಿದ ಶಾಲಾಭಿವುದ್ಧಿ ಸಮಿತಿಗೆ ಹೃತ್ಪೂರ್ವಕ ಅಭಿನಂದನೆಗಳು.
ಮುಂದಿನ ವರ್ಷಗಳಲ್ಲಿ ಇನ್ನಷ್ಟು ಶ್ರೇಷ್ಠ ಸಾಧನೆಗಳತ್ತ ಸಾಗಲಿ ಈ ಯಶಸ್ಸಿನ ಪಥ!
ಪಿಯುಸಿ ಫಲಿತಾಂಶ ಇಲ್ಲಿ check ಮಾಡಿ.
ಪಿಯುಸಿ ನಂತರ ಮುಂದೆ ಏನು ಮಾಡಬೇಕು ಎಂಬ ಗೊಂದಲದಲ್ಲಿ ಇದ್ದೀರಾ? ಈ ಕೆಳಗಿನ ವಿಡಿಯೋ ನೋಡಿ.

